ಸಾವರ್ಕರ್ ಲೇಖನದ ಕುರಿತು ಮಿತ್ರ ಸತೀಶ್ ಅವರು ಪ್ರತಿಕ್ರಿಯೆ ನೀಡಲು ಹೋಗಿ ಒಂದು ಲೇಖನವನ್ನೇ ಬರೆದಿದ್ದೀರಿ, ಲೇಖನ ಅಷ್ಟರ ಮಟ್ಟಿಗೆ ಪ್ರೇರಣೆ ನೀಡಿತ್ತಲ್ಲ ಆ ಕಾರಣಕ್ಕಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಕೂಡ ಅದೇ ಹಾದಿ ಹಿಡಿದಿದ್ದೇನೆ...
ನೀವು ನನ್ನ ಸಾರ್ವಕರ್-ಗಾಂಧಿ-ಬೆಳಗೆರೆ ಲೇಖನಕ್ಕೆ ಕೆಲವೊಂದು ಪ್ರಶ್ನೆಗಳನ್ನು ಎಸೆದಿದ್ದೀರಿ, ಆದರೆ ನೀವು ನನ್ನ ಲೇಖನವನ್ನು ಸೂಕ್ಷ್ಮವಾಗಿ ಓದಿಲ್ಲ ಅಂತ ಕಾಣಿಸುತ್ತದೆ (ಅವಸರವೇ ಅಪಘಾತಕ್ಕೆ ಕಾರಣ ಎನ್ನುವಂತೆ), ಅವಸರದ ಓದು ಅನರ್ಥಕ್ಕೆ ಕಾರಣವಾಗುತ್ತದೆ. ನೀವು ಬರೆದ ಲೇಖನದಲ್ಲಿಯೇ ನೀವೇ ಅದನ್ನೇ ಪ್ರಶ್ನಿಸಿಕೊಂಡರೆ, ನಾನು ಕೇಳಬೇಕಾದ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗುತ್ತದೆ.
ನನ್ನ ಲೇಖನದಲ್ಲಿ ಎಲ್ಲಿಯೂ ಸಾವರ್ಕರ್ ದೇಶಭಕ್ತನಲ್ಲ ಎಂದು ವಾದಿಸಿಲ್ಲ, ಅಲ್ಲದೇ ಸಾವರ್ಕರ್ ಅವರು ಕ್ಷಮೆಯಾಚನೆ ಕೇಳಿ ದ್ದರೋ ಇಲ್ಲವೋ ಎನ್ನುವುದನ್ನು ಮೊದಲು ನೋಡೋಣ ಎಂದು ಪ್ರತಿಕ್ರಿಯಿಸಿ, ಓರ್ವ ಸಾಹಸಿ ಎಂದಾದರೂ ಪ್ರಾಣ ಭಿಕ್ಷೆ ಬೇಡುವ ಸಾಧ್ಯತೆ ಉಂಟಾ, ಸಾಧ್ಯವೇ ಇಲ್ಲ ಎನ್ನುವುದು ಇತಿಹಾಸ ಪ್ರಸಿದ್ದರು ತಮ್ಮ ಜೀವನವನ್ನೇ ಉದಾಹರಣೆ ಮೂಲಕ ತೋರಿಸಿದ್ದಾರೆ ಎಂದು ರಾಣಾ, ಚೌಹಾಣ್ ಹೆಸರು ಬಳಸಿದ್ದೀರಿ.(http://www.frontlineonnet.com ಲಿಂಕ್ ಅನ್ನು ನೋಡಿ)
ಮುಖ್ಯ ಅಂಶ ಇರುವುದೇ ಇಲ್ಲಿ, ರಾಣಾ, ಚೌಹಾಣ್,ಟಿಪ್ಪು,ಸಂಗೊಳ್ಳಿರಾಯಣ್ಣ ಯಾರೂ ಪ್ರಾಣ ಭಿಕ್ಷೆ ಕೇಳಿಲ್ಲ, ಆದರೆ ವೀರ ಎಂದು ಬಿರುದ ತೆಗೆದುಕೊಂಡ ಸಾವರ್ಕರ್ ಅವರು ದಯಾ ಭಿಕ್ಷೆ ಕೇಳಿರುವುದರ ಬಗ್ಗೆ ಅವರ ''ವೀರತನ''ವನ್ನು ಪ್ರಶ್ನಿಸಿದ್ದೆ, ಸ್ವಾತಂತ್ರ್ಯ ಸಂಗ್ರಾಮದ ಭಗತ್, ಆಜಾದ್,ಸುಭಾಷ್ ಎಲ್ಲರೂ ಗುಂಡಿಗೆ ಎದೆಯೊಡ್ಡಿ ನಿಂತವರೇ, ಆದರೆ ಸಾವರ್ಕರ್ ಅದ್ಯಾಕೆ (ನಿಮ್ಮ ದೃಷ್ಟಿಯಲ್ಲಿ ಕ್ಷಮಾಯಾಚನಾ ಪತ್ರವೂ ಕೂಡ, ವೀರ ಮತ್ತೆ ಹೊರಬಂದು ಸ್ವಾತಂತ್ರ್ಯ ಸಂಗ್ರಾಮವನ್ನು ಮುಂದುವರಿಸುವುದಾಗಿದೆ ಎಂಬ ನಿಲುವು ತಳೆದಿದ್ದೀರಿ, ಆದರೆ ಅದಕ್ಕಾಗಿ ಬ್ರಿಟಿಷ್ರ ಕಾಲು ಹಿಡಿಯಬೇಕಾದ ಅಗತ್ಯ ಇರಲಿಲ್ಲ, ಅವರು ನೇಣುಕುಣಿಕೆಗೆ ಕೊರಳೊಡ್ಡಿದ್ದರೂ ಅಥವಾ ಅಜೀವ ಕಾರಾಗೃಹವಾಸ ಅನುಭವಿಸಿದ್ದರು ಕೂಡ, ಅಂತಹ ನೂರಾರು ದೇಶಭಕ್ತರು ಸ್ವಾತಂತ್ರ್ಯ ಚಳವಳಿಯಲ್ಲಿ ಇದ್ದಿದ್ದರು ಎಂಬ ನೆನಪು ನಿಮಗೆ ಇದ್ದಿರಲಿ!!,
ಅವರು ಕ್ಷಮಾ ಯಾಚನೆ ಪತ್ರ ಬರೆಯುವುದಕ್ಕಿಂತ ಅಷ್ಟೂ ವರ್ಷಗಳ ಕಾಲ ಶಿಕ್ಷೆ ಅನುಭವಿಸಿಯೋ ಇಲ್ಲ, ನೇಣಿಗೇರಿದ್ದರೂ ಕೂಡ ಸಾವರ್ಕರ್ ನಿಜಕ್ಕೂ ವೀರರಾಗಿ ಸಾವಿರಾರು ದೇಶಭಕ್ತರಿಗೆ ಸ್ಪೂರ್ತಿಯ ಸೆಲೆಯಾಗಬಹುದಿತ್ತು.) ಗೋಗರೆದು ಪತ್ರ ಬರೆದು ಕೇಳಿದ್ದು, ತಮಾಷೆಗಾಗಿ ಅಲ್ಲ, ಬಿಡುಗಡೆಗಾಗಿ, ಅಲ್ಲದೇ ನಿಮ್ಮ ಹ್ಯೂಮನ್ ನೇಚರ್ ಆಧಾರ ಬಾಲಿಶತನದ್ದು, ಯಾಕೆಂದರೆ ಅಂಡಮಾನ್ ಜೈಲು ಅಧಿಕಾರಿಗಳಿಗೆ ಸ್ವತಃ ಸಾವರ್ಕರ್ ಅವರೇ ಕ್ಷಮಾಯಾಚನಾ ಪತ್ರ ಬರೆದಿರುವುದು ಅಧಿಕೃತವಾಗಿ ಲಭ್ಯವಿರುವಾಗಲೂ ವೀರ ಸಾವರ್ಕರ್ ಕ್ಷಮೆಯಾಚನೆಯನ್ನು ಕೇಳಿರಲಿಕ್ಕಿಲ್ಲ ಎನ್ನುವುದು ಮಾನವ ಸ್ವಭಾವದ ಮೂಲಕ ವೇದ್ಯವಾಗುತ್ತದೆ ಎಂದು ಬರೆದಿದ್ದೀರಿ !!!.
ಅಷ್ಟಕ್ಕೂ ನಿಮಗೆ ಇನ್ನೂ ನಿಮ್ಮ ಪೂರ್ವಾಗ್ರಹಕ್ಕೆ ಸಮಾಧಾನ ಸಿಕ್ಕಿಲ್ಲ ಎಂದಾದರೆ, 1964ರಲ್ಲಿ ಭಾರತ ಸರಕಾರ ನೇಮಿಸಿದ್ದ ಸರ್ವೊಚ್ಛನ್ಯಾಯಾಲಯದ ನ್ಯಾಯಾಧೀಶರಾದ ಎಲ್.ಜೆ.ಕಪೂರ್ ಆಯೋಗ ವರದಿಯನ್ನು ಪರಿಶೀಲಿಸಿ, ಅದರಲ್ಲಿ ಗಾಂಧಿ ಕೊಲೆಗೆ ನಡೆದ ಸಂಚು, ಅದರಲ್ಲಿ ಯಾರ,ಯಾರ ಪಾತ್ರ ಎಷ್ಟು ಎಂದು ಸ್ಪಷ್ಟವಾಗಿ ವರದಿ ಮಾಡಿದ್ದಾರೆ, ಅದರಲ್ಲಿ ಸಾವರ್ಕರ್ ಪಾತ್ರವನ್ನೂ ಪ್ರಸ್ತಾಪಿಸಲಾಗಿದೆ.
ಇನ್ನು ತಾವು ಗೋಡ್ಸೆ-ಸಾವರ್ಕರ್ ಸಂಬಂಧದ ಬಗ್ಗೆ ಪ್ರಸ್ತಾಪಿಸುತ್ತ, ಸಭೆ ಸಂಘಟನೆ ಎಂದ ಮೇಲೆ ಸಾವಿರಾರು ಜನ ಬರುತ್ತಾರೆ ಹೋಗುತ್ತಾರೆ ಅಂತ ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ಬರೆದಿದ್ದೀರಿ. ಗೋಡ್ಸೆ-ಸಾವರ್ಕರ್ ಸಂಬಂಧ ಗುರು-ಶಿಷ್ಯರದ್ದಾಗಿದೆ, ಅದನ್ನು ಕೇವಲ ಸಂಘಟನಾತ್ಮಕ ಸಂಬಂಧಗಳ ಆಧಾರದ ಮೇಲೆ ಮಾಡುವ ಆಪಾದನೆಯಲ್ಲಿ ಹುರುಳಿಲ್ಲ ಎಂಬ ಮಾತಿನಲ್ಲಿ ಯಾವುದೇ ಸತ್ಯಾಂಶ ಇಲ್ಲ.
ಮತ್ತೆ ನನ್ನ ಪ್ರಶ್ನೆ ಇರುವುದು ಗಾಂಧಿ ಹತ್ಯೆಯ ಹಿಂದಿನ ಸಂಚಿನ ಕುರಿತಾಗಿ ಮಾತ್ರ, ಗಾಂಧಿ ಮಾಡಿದ ಘೋರ ಅನ್ಯಾಯದ ಬಗ್ಗೆ ನನಗೂ ತಿಳಿದಂತೆ ಎಲ್ಲರಿಗೂ ಗೊತ್ತಿರುವ ನಗ್ನ ಸತ್ಯವಾಗಿದೆ. ಸಾವರ್ಕರ್ ಬಗ್ಗೆ ಹೇಳುತ್ತಾ ನೀವು ದಿಕ್ಕು ತಪ್ಪಿ ಹೋಗಿದ್ದೀರಿ....!!!
ದ್ವಿರಾಷ್ಟ್ರದ ಕುರಿತಂತೆ ನೀವು, ಜಿನ್ನಾ ತಿಲಕರ ಕಟ್ಟಾ ಅನುಯಾಯಿಗಿದ್ದರು ಎನ್ನುವುದನ್ನು ಮೊದಲು ಗಮನಿಸಬೇಕಾದ್ದು ಅಂತ ಹೇಳಿದ್ದೀರಿ, ಆದರೆ ಅದಕ್ಕಿಂತಲೂ ಹೆಚ್ಚಾಗಿ ಜಿನ್ನಾ ರಾಷ್ಟ್ರೀಯವಾದಿಯಾಗಿದ್ದರು, ಮೂಲಭೂತವಾದಿಯಾಗಿಲ್ಲ ಎಂಬ ಅಂಶ ನಿಮಗ್ಯಾಕೆ ಹೊಳೆಯಲಿಲ್ಲವೊ, ಸಾವರ್ಕರ್ ಅವರ ದ್ವಿರಾಷ್ಟ್ರ ಸಿದ್ದಾಂತದ ಬಳಿಕ, ಕಾಂಗ್ರೆಸ್ನಿಂದ ಹೊರಬಿದ್ದ ಜಿನ್ನಾ ಅಪ್ಪಟ್ಟ ಮತೀಯವಾದಿಯಂತೆ ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿದ್ದರು ಎಂಬುದು ನೆನಪಿರಲಿ.
ಅದಕ್ಕಿಂತಲೂ ಪ್ರಮುಖವಾಗಿ ಪ್ರಸ್ತಾಪಿಸಬೇಕಾಗಿರುವ ಅಂಶ ಏನೆಂದರೆ, ಸಂಶಯದ ಸೌಲಭ್ಯದ ಆಧಾರದ ಮೇಲೆ ದೋಷ ಮುಕ್ತರೆಂದು ಬಿಡುಗಡೆ ಮಾಡುವುದು, ನಿಃಸಂದಿಗ್ಧವಾಗಿ ನಿರ್ದೋಷಿ ಎಂದು ಸಾರುವುದೂ ಒಂದೇ ಅಲ್ಲ(ಕೊ.ಚೆ.ಅವರ ಉಲ್ಲೇಖ)ಎಂಬುದನ್ನು ನೆನಪಿಡಿ. ಕಾಯ್ದೆಯ ಸೂಕ್ಷ್ಮ ಗೊತ್ತಿಲ್ಲದವರಿಗೆ ಗೊತ್ತಾಗುವಂತೆ ಹೇಳಬೇಕೆಂದರೆ, ಕಂಬಾಲಪಲ್ಲಿಯ ಏಳು ಜನ ದಲಿತರನ್ನು ಸಜೀವ ದಹನ ಮಾಡಿದ ಮೊಕದ್ದಮೆಯಲ್ಲಿನ ಆರೋಪಿಗಳೆಲ್ಲರೂ ಬಿಡುಗಡೆಯಾಗಿದ್ದರು, ಹಾಗೆ ಶಿಕ್ಷೆ ತಪ್ಪಿಸಿಕೊಂಡಾಕ್ಷಣ ಅವರೆಲ್ಲ ನಿರ್ದೋಷಿಗಳಲ್ಲ ಎಂಬುದು ಸಾಮಾನ್ಯ ಜನರಿಗೂ ತಿಳಿಯುತ್ತೆ....

ಲೋಡ್ ಆಗುತ್ತಿದೆ......