Welcome, Guest   [ Register | Sign In | Take a tour | Adult Filter: On ]

ಶ್ರೀರಾಮಸೇನೆಯ ಗೂಂಡಾ ಸಂಸ್ಕೃತಿ

ಮಂಗಳೂರಿನ ಎಮ್ನೇಶಿಯ ಪಬ್‌‌ನಲ್ಲಿ ಅಶ್ಲೀಲ ನರ್ತನ ಮಾಡುತ್ತಿದ್ದರು, ಅನೈತಿಕ ಚಟುವಟಿಕೆ ನಡೆಸುತ್ತಿದ್ದರು, ಇದು ದೇಶದ ಸಂಸ್ಕೃತಿಗೆ ಆದ ಅಪಚಾರ ಎಂದು ಆರೋಪಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಇದೀಗ ದೇಶವ್ಯಾಪಿ ಚರ್ಚೆಗೆ ಒಳಗಾಗಿದೆ. ಹೌದು, ಪಬ್‌ನಲ್ಲಿ ನರ್ತನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು ಸರಿ ಎಂಬುದು ಹಲವರ ವಾದವಾದರೆ, ದೇಶದ ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಅವರಿಗೆ ಅಧಿಕಾರ ಕೊಟ್ಟವರಾರು ಎಂದೂ ಮಹಿಳಾ ಸಂಘಟನೆಗಳು ಕಟುವಾಗಿ ಪ್ರಶ್ನಿಸಿವೆ. ಇದು ತಾಲಿಬಾನ್ ಸಂಸ್ಕೃತಿಯ ಪ್ರತಿರೂಪ ಎಂದು ಕೇಂದ್ರ ಸಚಿವ ರೇಣುಕ ಚೌಧುರಿ ಗಂಭೀರವಾಗಿ ಆರೋಪಿಸಿದ್ದಾರೆ.

ಪಬ್‌ನಲ್ಲಿ ಅಶ್ಲೀಲವಾಗಿ ನರ್ತಿಸುತ್ತಿದ್ದರು, ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಬರುತ್ತದೆ. ಈ ರೀತಿ ಮಾಡುವುದರಿಂದ ಯುವ ಪೀಳಿಗೆಗೆ ಎಚ್ಚರಿಕೆಯ ಸಂದೇಶ ಹೋಗುತ್ತದೆ. ಮತ್ತು ಇಂತಹ ಹೋರಾಟವನ್ನು ಮುಂದುವರಿಸುವುದಾಗಿಯೂ ಸೇನೆಯ 'ದಂಡಾಧಿಕಾರಿ' ಪ್ರಮೋದ್ ಮುತಾಲಿಕ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ನಿಜಕ್ಕೂ ಪಬ್ ಮೇಲೆ ದಾಳಿ ಮಾಡುವುದರಿಂದ ಸಂಸ್ಕೃತಿಯ ರಕ್ಷಣೆ ಸಾಧ್ಯವೆ?
ಅಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿದ್ದರು ಇದರಿಂದ ನಮ್ಮ ಸಂಸ್ಕೃತಿಯೇ ಎಕ್ಕುಟ್ಟಿ ಹೋಗುತ್ತಿದೆ ಅಂತ ಲಬೋ, ಲಬೋ ಅಂತ ಬಡಿದುಕೊಳ್ಳುವುದರಲ್ಲಿ ಅರ್ಥವಿದೆಯಾ ? ಮಂಗಳೂರಿನ ಪಬ್‌ನಲ್ಲಿ ಅರೆಬೆತ್ತಲೆ ನರ್ತನ ಮಾಡುತ್ತಿರುವುದರಿಂದ ಸಂಸ್ಕೃತಿ ಹಾಳಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಿರುವ ಶ್ರೀರಾಮಸೇನೆ (ಇದನ್ನು ಸಂಘ-ಪರಿವಾರ ಕೂಡ ಅದನ್ನೇ ಮಾಡಿದೆ, ಈಗ ಬಿಜೆಪಿಯಿಂದ ಮುನಿಸಿಕೊಂಡು ಶ್ರೀರಾಮಸೇನೆ ಕಟ್ಟಿರುವ ಮುತಾಲಿಕ್ ಮೇಲೆ ಅಸಮಾಧಾನ ಇರುವುದರಿಂದಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ. ಅದೇ ಬಿಜೆಪಿ ಅಂಗಸಂಸ್ಥೆಗಳು ಮಾಡಿದ್ದರೆ ಅಂತಹ ಕ್ರಮಕ್ಕೆ ಶೀಘ್ರವೇ ಮುಂದಾಗುತ್ತಿದ್ದರೆ ಎಂಬುದು ಬೇರೆ ಪ್ರಶ್ನೆ. ಚರ್ಚ್ ದಾಳಿ ಪ್ರಕರಣದಲ್ಲಿ ಬಜರಂಗದಳದ ಮಹೇಂದ್ರ ಕುಮಾರ್ ಮಾಧ್ಯಮದಲ್ಲಿ ಘಟನೆಯ ಹೊಣೆ ಹೊತ್ತುಕೊಂಡು ಹೇಳಿಕೆ ನೀಡಿದ್ದರಿಂದ ಅವರು ತಲೆದಂಡ ಕೊಡಬೇಕಾಯಿತು ಅಷ್ಟೇ.)

ಇಂದು ಹಿಂದಿ, ತಮಿಳು, ಕನ್ನಡ ಸಿನಿಮಾಗಳಲ್ಲಿ ತೋರಿಸುವ ಅರೆನಗ್ನ ದೃಶ್ಯಗಳನ್ನು ನೋಡಿ ಯುವ ಪೀಳಿಗೆ ಹಳ್ಳಹಿಡಿದು ಹೋಗುವುದಿಲ್ಲವಾ?ಪ್ರತಿ ತಾಲೂಕುಗಳಲ್ಲಿ 'ಎ' (ಹೆಚ್ಚಾಗಿ ಮಲಯಾಳಂ ಭಾಷೆಯ) ಸಿನಿಮಾಗಳು ಪ್ರದರ್ಶನಗೊಳ್ಳುತ್ತದೆ, ಅಲ್ಲೆಲ್ಲ ಸಾಲು,ಸಾಲಾಗಿ ನಿಂತು ಸಿನಿಮಾ ನೋಡಿ ಬರುತ್ತಾರಲ್ಲ, ಅದರಿಂದ ಸಂಸ್ಕೃತಿಗೆ ಧಕ್ಕೆ ಬರುವುದಿಲ್ಲವಾ? ಹೋಗಲಿ ಹಿಂದಿ, ಇಂಗ್ಲಿಷ್ ಕೆಲವು ಸಿನಿಮಾಗಳಲ್ಲಿ ಮೈಮೇಲೆ ಬಟ್ಟೆ ಎಲ್ಲಿದೆ ಎಂದು ಹುಡುಕಬೇಕಾಗುತ್ತೆ.... ಅದನ್ನು ಬಾಯಿ ಚಪ್ಪರಿಸಿಕೊಂಡು, ಸಿಳ್ಳೆ ಹಾಕಿ ನೋಡುವ ನಾವು ಅದರಿಂದ ಸಂಸ್ಕೃತಿಗೆ ಅಪಚಾರ ಅಗುವುದಿಲ್ಲವಾ? ಇವತ್ತು ಸೈಬರ್ ಸೆಂಟರ್‌ಗಳಲ್ಲಿ ನಡೆಯುತ್ತಿರುವ ಸೈಬರ್ ಸೆಕ್ಸ್ ಬಗ್ಗೆ ನೀವ್ಯಾಕೆ ಸುಮ್ಮನಿದ್ದೀರಿ ಸೇನೆಯವರೇ ? ಪಬ್‌ಗೆ ಹೋಗುವುದರಿಂದ, ಅವರನ್ನು ನೋಡುವುದರಿಂದ ಉಳಿದವರು ಹಾಳಾಗುತ್ತಾರೆಂಬ ಧೋರಣೆ ಇದೆಯಲ್ಲ ಅದೇ ದೊಡ್ಡ ವಿಪರ್ಯಾಸದ್ದು. ನಾವು ನೆಟ್ಟಗಿದ್ದರೆ ಅದ್ಯಾಕೆ ಹಾಗಾಗುತ್ತೆ, ಹೋಗಲಿ ಒಬ್ಬರನ್ನು ನೋಡಿ ಹಾಳಾಗುವುದು, ಹೇಳಿದ್ದನ್ನು ಕೇಳಿ ಹಾಳಾಗುವುದು,ಒಳ್ಳೆಯದಾಗುವುದು ಅಂತ ಆದರೆ... ರಾಮಾಯಣ, ಮಹಾಭಾರತ ಸಿರಿಯಲ್ ನೋಡಿ ಅದೆಷ್ಟು ಮಂದಿ ಶ್ರೀರಾಮ, ಧರ್ಮರಾಯ ಆಗಬೇಕಿತ್ತು. ಯಾರು ಆಗಿಲ್ವಲ್ಲಾ. ಧರ್ಮದ ರಕ್ಷಣೆ, ಸಂಸ್ಕೃತಿಯ ರಕ್ಷಣೆ ಮಾಡಲು ಶ್ರೀರಾಮಸೇನೆಗೆ ಗುತ್ತಿಗೆ ನೀಡಿದ್ದಾರಾ?

ಹೋಗಲಿ ಸಾಹಿತ್ಯಗಳಲ್ಲಿ ಎಷ್ಟು ಅಶ್ಲೀಲ ಇಲ್ಲ, ಅವೆಲ್ಲ ಓದಿದವನು ಹಾಳಾಗಬೇಕಲ್ಲ....ಹಾಗಾದರೆ ತಾಲಿಬಾನ್ ಹುಡುಗಿಯರಿಗೆ ಶಾಲೆಗೆ ಹೋಗಬೇಡಿ, ಪುರುಷರು ಗಡ್ಡ ಬೋಳಿಸಿಕೊಳ್ಳಬೇಡಿ ಎಚ್ಚರ ಎಂದು ಫರ್ಮಾನು ಹೊರಡಿಸುತ್ತೆ....ಅದು ಮಾಡುವುದು ಸಂಸ್ಕೃತಿ ಮತ್ತು ಧರ್ಮದ ಹೆಸರಲ್ಲಿ. ನೀವು ಕೂಡ ಅದನ್ನೇ ಮಾಡುತ್ತೀರಲ್ಲ ಏನಾದರು ವ್ಯತ್ಯಾಸ ಇದೆ ಅನ್ನಿಸುತ್ತಾ ?ನೀವು ಧರ್ಮದ ರಕ್ಷಣೆ....ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಮಾಡುತ್ತೀರಿ ಎಂದು ಸಮರ್ಥನೆ ನೀಡುತ್ತೀರಿ ಎಂದಾದರೆ...ತಾಲಿಬಾನಿಗಳು ಅದನ್ನೇ ಹೇಳುತ್ತಾರಲ್ಲ. ಅವರ ದೃಷ್ಟಿಯಲ್ಲಿ ಅದು ಪವಿತ್ರ ಕೆಲಸ !! ಪಬ್ ಸಂಸ್ಕೃತಿಯಿಂದ ಯುವ ಪೀಳಿಗೆ ಕೆಟ್ಟ ಹಾದಿ ಹಿಡಿಯುತ್ತೆ, ಅದನ್ನು ನಾವು ನಿಲ್ಲಿಸುತ್ತೇವೆ ಸಂಸ್ಕೃತಿಯನ್ನು ರಕ್ಷಿಸುತ್ತೇವೆ ಎಂಬ ವಾದ ಇದೆಯಲ್ಲ.... ಸಿನಿಮಾದಲ್ಲಿ ಹೀರೋ ನೂರು ಜನರನ್ನು ಹೊಡೆದು ಸಮಾಜದ ಉದ್ದಾರಕ್ಕೆ ಹೊರಟ ಹಾಗೇ...ಅಷ್ಟೇ ಬಾಲಿಶವಾದದ್ದು......

ಪ್ರತಿಸ್ಪಂದನಗಳು

Re: ಶ್ರೀರಾಮಸೇನೆಯ ಗೂಂಡಾ ಸಂಸ್ಕೃತಿ
ತಾಲಿಬಾನಿಗಳಿಗೂ ಶ್ರೀರಾಮಸೇನೆಗೂ ಏನು ವ್ಯತ್ಯಾಸವಿಲ್ಲ. ದೇಶರಕ್ಷಣೆಯ ನೆಪದಲ್ಲಿ , ಮೂರು ಕಾಸು ಬಾಳದ ಮುತಾಲಿಕ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳು. ಐವರು ಪತಿಯರನ್ನು ವರಿಸಿದ ದ್ರೌಪದಿಯನ್ನು ಪತಿವ್ರತೆ..ಸಾವಿರಾರು ಹೆಂಡತಿಯರನ್ನು ಪಡೆದ ಕೃಷ್ಣನನ್ನು ದೇವರೆಂದು ಪೂಜಿಸುವ ನಮ್ಮ ಸಂಸ್ಕ್ರತಿಗೆ, ಹುಡುಗ ಹುಡುಗಿ ಅಶ್ಲೀಲವಾಗಿ ನರ್ತನ ಮಾಡಿದ ಕೂಡಲೇ ಸಂಸ್ಕ್ರತಿ ಹಾಳಾಗುತ್ತಂತೆ. ದೇಶದಲ್ಲಿ ಸಂವಿಧಾನವಿದೆ. ಕಾನೂನುಬಾಹಿರ ಕೃತ್ಯಗಳನ್ನು ತಡೆಯಲು ಪೊಲೀಸ್ ವ್ಯವಸ್ಥೆಯಿದೆ.ದೇಶದ ಸಂವಿಧಾನವನ್ನೆ ಉಲ್ಲಂಘಿಸುವ ಇವರಿಗೆ ಸಂಸ್ಕ್ರತಿ ಬೇರೆ ಕೇಡು...ನಾಚಿಕೆ ಬರಲಿ ನಮ್ಮ ಕದ್ದು ಮುಚ್ವಿ ನಡೆಯುವ ಸಂಸ್ಕ್ರತಿಗೆ ಲೇಖನ ಚೆನ್ನಾಗಿದೆ ಮುಂದುವರಿಸಿ ನಮ್ಮ ಬೆಂಬಲ ನಿಮಗಿದೆ..
Re: ಶ್ರೀರಾಮಸೇನೆಯ ಗೂಂಡಾ ಸಂಸ್ಕೃತಿ
ಅಶ್ಲೀಲ ನೃತ್ಯವು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಶ್ರೀರಾಮಸೇನೆಯ ಕಾರ್ಯಕರ್ತರು ಯುವತಿಯರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಖಂಡನೀಯ, ಹಾಗಾದರೆ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಮೇಲೆ ಗೂಂಡಾಗಿರಿ ಮಾಡುವುದಕ್ಕೆ ಅವಕಾಶವಿದೆಯೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಪುರಾಣಕಾಲದಲ್ಲಿ ಶ್ರೀರಾಮನ ಕಪಿಸೈನ್ಯವು ಮಹಿಳೆಯರ ಬಗ್ಗೆ ಗೌರವದ ಭಾವನೆ ಇರಿಸಿಕೊಂಡಿದ್ದಕ್ಕೆ ಹನುಮಂತನ ವರ್ತನೆಯೇ ಸಾಕ್ಷಿಯಾಗಿದೆ. ಆದರೆ ಕಲಿಯುಗದ ಬಾಲವಿಲ್ಲದ ಶ್ರೀರಾಮಸೇನೆ ಕಾರ್ಯಕರ್ತರ ಗೂಂಡಾಗಿರಿ ರಾವಣಸೈನ್ಯದ ರಾಕ್ಷಸರೂ ನಾಚಿಕೆಯಿಂದ ತಲೆತಗ್ಗಿಸುವಂತಿದೆ.....ಗುಣವರ್ಧನ್
Re: ಶ್ರೀರಾಮಸೇನೆಯ ಗೂಂಡಾ ಸಂಸ್ಕೃತಿ
ಕೃಷ್ಣನನ್ನು, ದ್ರೌಪದಿಯನ್ನು ಅರಿಯದೆ ಮಾತನಾಡುವುದು ಬಾಲಿಶತನ. ಯಾರನ್ನು ಯಾರು ಬೇಕಿದ್ದರೂ ಪೂಜಿಸುವುದು ಈ ದೇಶ ಕೊಟ್ಟ ಧಾರ್ಮಿಕ ಹಕ್ಕು. ಅದು ಸಂವಿಧಾನ ದತ್ತವಾದುದು. ನಿಮ್ಮಂತವರು ಹೀಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಮಂಗಳೂರಿನಲ್ಲಿ ಚರ್ಚುಗಳ ಮೇಲೆ ದಾಳಿಯಾಗಿರುವುದು. ಸಮಾಜದ ಸ್ವಾಸ್ಥ್ಯ ಕೆಡಿಸಲು ನಿಮ್ಮಂಥವರ ಇಂತಹ ಮನಸ್ಥಿತಿ ಕಾರಣ. ಒಂದು ಧರ್ಮದ ಸಂಸ್ಕೃತಿಯನ್ನು ಅವಹೇಳನ ಮಾಡುವುದು ಈ ನೆಲದ ಕಾನೂನಿನ ಪ್ರಕಾರ ಅಪರಾಧ. ಕುಡಿದು, ಕುಣಿದು ತೂರಾಡಿ ಹಾಳಾಗಿ ಎಂದು ಪ್ರಪಂಚದಲ್ಲಿನ ಯಾವ ಧರ್ಮವೂ ಹೇಳಲಿಲ್ಲ. ನಮ್ಮಲ್ಲಿರುವ ಪೊಲೀಸ್ ವ್ಯವಸ್ಥೆ ಕಾನೂನುಬಾಹಿರ ಕೃತ್ಯಗಳನ್ನು ತಡೆಯುವ ಪರಿಯನ್ನು ಕಂಡಿದ್ದೇವೆ ಮತ್ತು ಕಾಣುತ್ತಲೇ ಇದ್ದೇವೆ. ಪುಂಡು ಪೋಕರಿಗಳನ್ನು ಟೀಕಿಸುವ ವೇಳೆ ಬಾಯಿಗೆ ಬಂದಂತೆ ಮಾತನಾಡಿದರೆ ಪರಿಣಾಮ ಬೇರೆಯಾಗುತ್ತದೆ. ಎಚ್ಚರವಿರಲಿ. ಬೆಂಬಲ ಸೂಚಿಸುವ ಪುಣ್ಯಾತ್ಮ ಕನಿಷ್ಠಪಕ್ಷ ಹೆಸರನ್ನಾದರೂ ಹೇಳಿಕೊಳ್ಳಲಿಲ್ಲ. ಏಕೋ? -ರಾಮ್ ಕುಮಾರ್
Re: ಶ್ರೀರಾಮಸೇನೆಯ ಗೂಂಡಾ ಸಂಸ್ಕೃತಿ
ರಾಜಧಾನಿ ಬೆಂಗಳೂರಿನಲ್ಲಿ ಸಂಸ್ಕೃತಿಯೆಂಬುದು ಎಕ್ಕುಟ್ಟು ಹೋಗಿದೆ. ಐಷಾರಾಮಿ ಪಾರ್ಟಿಗಳು, ಅರೆಬೆತ್ತಲೆ ನೃತ್ಯಗಳು, ಮಾದಕ ದ್ರವ್ಯ ಸೇವನೆ ಇವುಗಳ ಬಗ್ಗೆ ಯಾರಾದರೂ ಕ್ರಮ ತೆಗೆದುಕೊಂಡಿದ್ದಾರೆಯೇ? ಸಂಸ್ಕೃತಿ ಎಂಬುದು ಕೇವಲ ಪುರಾಣಗಳಿಗೆ, ಬರಹಕ್ಕೆ ಸೀಮಿತವಾಗಿದೆ. ಪೋಷಕರು ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟರೆ ಮಾತ್ರ ಎಲ್ಲದಕ್ಕೂ ಪರಿಹಾರ ಸಾಧ್ಯ. ದಂಡಂ ದಶಗುಣಂ ಎಂಬಂತೆ ಶ್ರೀರಾಮ ಸೇನೆಯವರಂತಹ ಇಂತಹ ಕೃತ್ಯ ಮಾತ್ರ ಹೆಚ್ಚುತ್ತಿರುವ ತುಂಡುಬಟ್ಟೆ ಸಂಸ್ಕೃತಿಯನ್ನು ಕನಿಷ್ಠ ಮನೆಯೊಳಗೆ ಸೀಮಿತಗೊಳಿಸೀತು. ಆದರೆ ಸಂಸ್ಕೃತಿಯೆಂಬುದು ಪ್ರತಿಯೊಬ್ಬರ ಮನಸ್ಸಿನಲ್ಲಿ ಹುಟ್ಟಬೇಕು.
Re: ಶ್ರೀರಾಮಸೇನೆಯ ಗೂಂಡಾ ಸಂಸ್ಕೃತಿ
ಅಂದರೆ ನಿಮ್ಮ ನಿಲುವೇನು? ಹಿಂದಿ, ತಮಿಳು, ಕನ್ನಡ ಸಿನಿಮಾಗಳಲ್ಲಿ ತೋರಿಸುವ ಅರೆನಗ್ನ ದೃಶ್ಯಗಳನ್ನು ನೋಡಿ ಹಳ್ಳಹಿಡಿಯುವ ಪೀಳಿಯ ಮೇಲೂ ದಾಳಿ ಮಾಡಬೇಕಾ? ಪ್ರತಿ ತಾಲೂಕುಗಳಲ್ಲಿ 'ಎ' (ಹೆಚ್ಚಾಗಿ ಮಲಯಾಳಂ ಭಾಷೆಯ) ಸಿನಿಮಾಗಳು ಪ್ರದರ್ಶನಗೊಳ್ಳುವಾಗ ಅಲ್ಲೆಲ್ಲ ಸಾಲು, ಸಾಲಾಗಿ ನಿಂತು ಸಿನಿಮಾ ನೋಡಿ ಬರುತ್ತಾರಲ್ಲ? ಅವರ ಕೂದಲು ಹಿಡಿದು ಬಗ್ಗಿಸಬೇಕಾ? ಹೋಗಲಿ ಹಿಂದಿ, ಇಂಗ್ಲಿಷ್ ಕೆಲವು ಸಿನಿಮಾಗಳಲ್ಲಿ ಮೈಮೇಲೆ ಬಟ್ಟೆ ಎಲ್ಲಿದೆ ಎಂದು ಹುಡುಕಬೇಕಾಗುತ್ತೆ.... ಅದನ್ನು ಬಾಯಿ ಚಪ್ಪರಿಸಿಕೊಂಡು, ಸಿಳ್ಳೆ ಹಾಕಿ ನೋಡುವ ನಿಮ್ಮ ಮೇಲೆ ದಾಳಿ ನಡೆಸಬೇಕಾ? ಇವತ್ತು ಸೈಬರ್ ಸೆಂಟರ್‌ಗಳಲ್ಲಿ ನಡೆಯುತ್ತಿರುವ ಸೈಬರ್ ಸೆಕ್ಸ್‌ಗೆ ಬಡಿಬೇಕಾ? ಟಿವಿ9ವರು ತೋರಿಸುವ ಕ್ರೈಂ ಸ್ಟೋರಿನ್ನು ಸಮರ್ಥಿಸಿಕೊಳ್ಳುತ್ತಾ "ರಾಮಾಯಣ, ಮಹಾಭಾರತ ಸಿರಿಯಲ್ ನೋಡಿ ಅದೆಷ್ಟು ಮಂದಿ ಶ್ರೀರಾಮ, ಧರ್ಮರಾಯ ಆಗಬೇಕಿತ್ತು. ಯಾರು ಆಗಿಲ್ವಲ್ಲಾ" ಎಂದು ಸಮರ್ಥಿಸುತ್ತಾರೆ. ಅದನ್ನೇ ನೀವೂ ಹೇಳ್ತೀರಾ? ಯಾಕೆ ಸ್ವಾಮಿ? ಗಾಂಧೀಜಿಯನ್ನು ಓದಿ ನೋಡಿ ಪ್ರಭಾವಿತರಾದವರು ನಮ್ಮಲ್ಲಿ ಯಾರೂ ಇಲ್ಲವಾ. ಗಾಂಧೀಜಿ ಯಾಕೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದರು? ಅವರ ಮೇಲೆ ಯಾರ ಪ್ರಭಾವ ಗೊತ್ತಾ? ನಿಮ್ಮ ಬ್ಲಾಗಲ್ಲೇ ಗಾಂಧೀಜಿ ಇದ್ದಾರೆ, ಅವರ ಪ್ರಭಾವ ಇದೆ. ನೆಹರೂ, ಬೋಸ್ ಯಾರ ಮೇಲೂ ಪ್ರಭಾವ ಬೀರಲಿಲ್ಲವಾ. ನಿಮ್ಮ ಮೇಲೆ ಲೋಹಿಯಾ ಪ್ರಭಾವ ಉಂಟು ಅಂತ ಹೇಳುವುದ್ಯಾಕೆ. ಧರ್ಮದ ರಕ್ಷಣೆ, ಸಂಸ್ಕೃತಿಯ ರಕ್ಷಣೆ ಮಾಡಲು ಶ್ರೀರಾಮಸೇನೆಗೆ ಗುತ್ತಿಗೆ ನೀಡಿದ್ದಾರಾ? (ಗೊತ್ತಿಲ್ಲ, ಒಳ ಒಪ್ಪಂದ ಆಗಿದ್ದರೂ ಆಗಿರಬಹುದು) ಕನಿಷ್ಠ ಪಕ್ಷ ಶ್ರೀರಾಮ ಸೇನೆಯವರು (ಸಿನಿಮಾದಲ್ಲಿ ಹೀರೋ ನೂರು ಜನರನ್ನು ಹೊಡೆದು ಸಮಾಜದ ಉದ್ದಾರಕ್ಕೆ ಹೊರಟ ಹಾಗೇ ಬಾಲಿಶವಾಗಿ) ಸಂಸ್ಕೃತಿಯೊಂದು ನಶಿಸುತ್ತಿರುವ ವಿರುದ್ಧ ಧ್ವನಿಯನ್ನಾದರೂ ಎತ್ತಿದ್ದಾರೆ. ನೀವು ಕೊಂಕು ಹುಡುಕುತ್ತಾ ಇದ್ದೀರಿ. ಜೈ ಶ್ರೀರಾಮ್! ರಾಮಸೇವಕ
Re: ಶ್ರೀರಾಮಸೇನೆಯ ಗೂಂಡಾ ಸಂಸ್ಕೃತಿ
trasiyavare neevu heluvudarallu nijavide. uthama lekhana...NIHARI...
Re: ಶ್ರೀರಾಮಸೇನೆಯ ಗೂಂಡಾ ಸಂಸ್ಕೃತಿ
ಎಲ್ಲವನ್ನೂ ಧರ್ಮದ ಚೌಕಟ್ಟಿನಲ್ಲಿಯೇ ನೋಡಿ, ಲಕ್ಷ್ಮಣರೇಖೆಯನ್ನು ಎಳೆಯಲು ಹೊರಡುತ್ತೀರಲ್ಲ ನಾನು 'ಆ' ಸಂಸ್ಕೃತಿಯನ್ನು ಪ್ರಶ್ನಿಸಿದ್ದು. ಅದರ ಅರ್ಥ ಸಿನಿಮಾ ನೋಡುವವರ ಮೇಲೆ, ಸಾಲು,ಸಾಲಾಗಿ ನಿಲ್ಲುವವರ ಮೇಲೆ ದಾಳಿ ಮಾಡಿ ಎಂದಲ್ಲ. ನಮ್ಮ ಸಂಸ್ಕೃತಿ ಎಕ್ಕುಟ್ಟಿ ಹೋಗುತ್ತದೆ ಎಂದು 'ಅಂಡಿ'ಗೆ ಮೆಣಸಿನ ಹುಡಿ ಬಿದ್ದವರ ಹಾಗೇ ಮೂಲಭೂತವಾದಿಗಳು ನಡೆಸುವ ದಾಳಿಗೆ ಧರ್ಮದ ರಕ್ಷಣೆ ಎಂಬ ಕೋಟೆ ಕಟ್ಟಿಕೊಳ್ಳುತ್ತೀರಿ, ಅದರ ಹಿಂದಿನ ರಾಜಕೀಯ ಅಜೆಂಡಾ ನಿಮಗೆ ಕಾಣಿಸುವುದಿಲ್ಲ. ಸಿನಿಮಾ, ಸೈಬರ್ ಸೆಕ್ಸ್ ಗಳಲ್ಲಿ ತಲ್ಲೀನರಾಗಿರುವ ಯುವ ಪೀಳಿಗೆ ಅದನ್ನು ನೋಡಿ ಹಾಳಾಗುತ್ತಾರಲ್ಲ, ಕೇವಲ ಪಬ್ ಸಂಸ್ಕೃತಿಯೊಂದೇ ಕಾರಣವಲ್ಲ ಎಂಬುದು ನನ್ನ ಪ್ರಶ್ನೆ. ಹಾಗೇ ನನ್ನ ನಿಲುವು ಕೂಡ ಸ್ಪಷ್ಟ. ಸಂಸ್ಕೃತಿ ರಕ್ಷಣೆ ಹೊರಟಿರುವ ಸೇನೆ ಇದೆಯಲ್ಲ ಅವರು ಅರಿವು ಮೂಡಿಸುವ ಕಾರ್ಯ ಮಾಡಲಿ, ಅನೈತಿಕತೆ, ಅನ್ಯಾಯ, ಅಧರ್ಮದ ವಿರುದ್ಧ ಪ್ರತಿಭಟನೆ ಮಾಡಿ, ಪಬ್ ಲೈಸೆನ್ಸ್ ರದ್ದು ಮಾಡಲು ಹೋರಾಡಿ, ಯಾಕೆ ಆಗುವುದಿಲ್ಲವಾ? ಅದನ್ನು ಬಿಟ್ಟು ಮಾಧ್ಯಮದವರನ್ನು ಜೊತೆಗೆ ಕರೆದುಕೊಂಡು ಹೋಗಿ ಗೂಂಡಾಗಿರಿ ಮಾಡುವುದಲ್ಲ. ನೀವೇ ಹೇಳುವ ಹಾಗೇ ಸಿಳ್ಳೆ ಹಾಕುವವರ ಮೇಲೆಲ್ಲ ದಾಳಿ ಮಾಡುತ್ತ ಹೋದರೆ ಏನಾಗುತ್ತೆ ಅಂತ ಈಗಾಗಲೇ ಬಾಲಸುಟ್ಟಕೊಂಡ ಸೇನೆ ಕಾರ್ಯಕರ್ತರಿಗೆ ತಿಳಿದಿದೆ. ಏನು ಬೇಕಾದರು ಮಾಡುತ್ತೇವೆ ಎಂದು ಹೊರಟವರು ಏನಾಗಿದ್ದಾರೆ ಎಂಬುದು ಇತಿಹಾಸದ ಅರಿವು ಇರುವವರಿಗೆ ತಿಳಿದಿದೆ. ನಾನೆಲ್ಲೂ ಬಡಿಯುವ ಬಗ್ಗೆ ಹೇಳಿಯೇ ಇಲ್ಲ, ನೀವೇ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ 'ಬಡಿಯುವುದು' ಅಂತ ಬಡಬಡಿಸಿದ್ದೀರಿ. ಸ್ವಾಮಿ ನೀವು ಪೂರ್ವಾಗ್ರಹ ಪೀಡಿತರಾಗಿ ಬರೆದಿದ್ದೀರಿ ಎಂಬುದಕ್ಕೆ ನಿಮ್ಮ ಪ್ರತಿಕ್ರಿಯೆ ಮತ್ತೊಮ್ಮೆ ಓದಿ. ಸ್ವಾಮಿ ಗಾಂಧಿ, ಬೋಸ್ ಅವರನ್ನು ನೋಡಿ, ಕಂಡು ಪ್ರಭಾವಿತರಾಗುವ ಕಾಲ ಹಿಂದೆ ಸರಿಯತೊಡಗಿದೆ. ಈಗ ಪ್ರಸ್ತುತ ಇರುವ ಗಾಂಧಿವಾದಿಗಳು ಹಿಂದಿನ ಕೊಂಡಿ. ಅವರಿಗೆ ಈ ಸೇನೆ, ಸಂಘಪರಿವಾರಗಳ ಅಟ್ಟಹಾಸ ನೋಡಿಯೇ ಹೈರಾಣಾಗಿದ್ದಾರೆ. ಆದರೂ ಅಷ್ಟೋ-ಇಷ್ಟೋ ಗಾಂಧಿ ಪ್ರಭಾವ ಇದೆ ಅದನ್ನು ಸಂಘ ಪರಿವಾರ ಎಷ್ಟೇ ಗಂಟಲು ಹರಿದುಕೊಂಡು ಅವರ ಮೇಲೆ ದಾಳಿ (ಬೌದ್ದಿಕ) ಮಾಡಿ ಬ್ರೈನ್ ವಾಶ್ ಮಾಡಲು ಸಾಧ್ಯವಿಲ್ಲ. ರಾಮರಾಜ್ಯದ ಕಲ್ಪನೆ ಎತ್ತಿಕೊಂಡು ರಾವಣ ರಾಜ್ಯ ಮಾಡಲು ಹೊರಟಿದೆಯಲ್ಲ ಅದೇ ದೊಡ್ಡ ದುರಂತ. ನನ್ನ ಮೇಲೆ ಲೋಹಿಯಾ, ಗಾಂಧಿ ಪ್ರಭಾವ ಇದೆಯೋ ಇಲ್ಲವೋ ಅಂತಾಗಲಿ, ಟಿವಿ9 ಕ್ರೈಂ ಸ್ಟೋರಿ ಬಗ್ಗೆ ಲೇಖನದಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ ನೀವು ಅದ್ಯಾವ ರೀತಿ ನ್ಯಾಸ್ಟ್ರೋಡಾಮಸ್ ಥರ ಭವಿಷ್ಯ ನುಡಿದಿರೋ ಗೊತ್ತಿಲ್ಲ. ನಿಮ್ಮ ಕಾಳಜಿ ಮೆಚ್ಚಬೇಕಾದ್ದೇ, ಸಂಸ್ಕೃತಿಯೊಂದು ನಶಿಸುತ್ತಿರುವ ವಿರುದ್ಧ ಶ್ರೀರಾಮ ಸೇನೆ ಧ್ವನಿ ಎತ್ತಿದೆ, ನೀವು ಕೊಂಕು ಹುಡುಕುತ್ತಾ ಇದ್ದೀರಿ ಅಂತ ಹೇಳಿದ್ದೀರಿ, ಸ್ವಾಮಿ ಅನಾಮಿಕರೇ ನೀವು ನಿಮ್ಮ ಪ್ರತಿಕ್ರಿಯೆಯಲ್ಲಿ ಕೊಂಕು ಹುಡುಕಿದ್ದು ನೀವು , ನಾನಲ್ಲ. ಭಾರತದ ಐದು ಸಾವಿರ ವರ್ಷಗಳ ಇತಿಹಾಸದಲ್ಲಿ ಸಾಕಷ್ಟು ಹೋರಾಟ, ಬದಲಾವಣೆ ಆಗಿದೆ. ಸಂಸ್ಕೃತಿ ರಕ್ಷಣೆ ಆಗಬೇಕಿದ್ದರೆ ದಾಳಿಯೇ ನಡೆಸಬೇಕಾ? ಮಂಗಳೂರಿನಲ್ಲಿ ಶ್ರೀರಾಮಸೇನೆ ಧ್ವನಿ ಎತ್ತಿದರೆ ಸಾಕಾಗುತ್ತಿತ್ತು, ಆದರೆ ಅವರು ಕೈ-ಕಾಲು, ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿದ್ದಾರಲ್ಲ ಅದು ಗೂಂಡಾಗಿರಿಯಲ್ಲದೇ ಮತ್ತಿನ್ನೇನು? ಸಂಸ್ಕೃತಿ, ಧರ್ಮ ಎಂದೆಲ್ಲಾ ಬೊಬ್ಬಿರಿಯುತ್ತಿರುವ ಶ್ರೀರಾಮಸೇನೆ(ಯಾವುದೇ ಸಂಘಪರಿವಾರ,ಇನ್ನಿತರ) ಗೆ ಸಮಾಜದ ಅದೆಷ್ಟು ಕಾಳಜಿ ಇದೆ ಎಂಬುದನ್ನು ಮೊದಲು ಪ್ರಶ್ನಿಸಬೇಕು. ರಾಜಾರಾಮ ಮೋಹನ್ ರಾಯ್ ಅವರಿಂದ ಹಿಡಿದು ಬಸವಣ್ಣ, ಗಾಂಧಿವರೆಗೆ ಯಾರು ದಾಳಿ ಸಂಸ್ಕೃತಿಯನ್ನು ಹುಟ್ಟು ಹಾಕಿಲ್ಲ, ಹಾಗೇ ದಾಳಿ ಮಾಡುವ ಮೂಲಕ ನಶಿಸುತ್ತಿರುವ(?) ಸಂಸ್ಕೃತಿ ಉಳಿಯುತ್ತೆ ಅಂತ ನಿಮಗೆ ಹ್ಯಾಗೆ ಅನ್ನಿಸಿತೋ ಶ್ರೀರಾಮನೇ ಬಲ್ಲ!!
ಹಕ್ಕು ನಿರಾಕರಣೆ